Neer Dose Karnataka
Take a fresh look at your lifestyle.

ಯುಧಿಷ್ಠಿರನಿಗೆ ಕೇವಲ ಧರ್ಮ, ರಾಜ್ಯದ ಕುರಿತು ಅಲ್ಲ, ಆರೋಗ್ಯದ ಕುರಿತು ಕೂಡ ಸಲಹೆ ನೀಡಿದ್ದಾರೆ ಭೀಷ್ಮ ಪಿತಾಮಹರು. ಏನು ಹೇಳಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಯಾರಾದರೂ ಕೊಟ್ಟ ಮಾತನ್ನು ತಪ್ಪುವುದಿಲ್ಲ ಎಂದಾದರೆ ಅದನ್ನು ಭೀಷ್ಮ ಪ್ರತಿಜ್ಞೆ ಎನ್ನುತ್ತಾರೆ. ಭೀಷ್ಮ ಕೊಟ್ಟ ಮಾತನ್ನು ತನ್ನ ಕೊನೆಯುಸಿರು ಇರುವವರೆಗೂ ಉಳಿಸಿಕೊಂಡು ಹೋಗಿದ್ದೆ ಈ ಮಾತು ಪ್ರಚಲಿತಕ್ಕೆ ಬರಲು ಕಾರಣ. ಭೀಷ್ಮ ಪಿತಾಮಹ, ಮಹಾಭಾರತದ ಅತ್ಯದ್ಭುತ ಪಾತ್ರ. ಅವರ ಪ್ರತಿಯೊಂದು ನಿಲುವುಗಳು, ಅವರ ಜ್ಞಾನ, ವಿದ್ಯೆ ಇವೆಲ್ಲವೂ ಇತರರಿಗೆ ಮಾದರಿ.

ಮಹಾಭಾರತದಲ್ಲಿ 18 ದಿನಗಳ ಕಾಲ ಯುದ್ಧ ನಡೆಯುತ್ತದೆ. ಅದು ಕೌರವ ಹಾಗೂ ಪಾಂಡವರ ನಡುವೆ. ಇದುವೇ ಕುರುಕ್ಷೇತ್ರ ಯುದ್ಧ. ಕೌರವರ ಸೇನಾಪತಿಯಾಗಿ 10 ದಿನಗಳ ಕಾಲ ಭೀಷ್ಮರು ಸೇನೆಯನ್ನು ನಡೆಸುತ್ತಾರೆ. ಧರ್ಮ ಹಾಗೂ ನ್ಯಾಯದ ಪರವಾಗಿರುವ ಪಾಂಡವರ ಮೇಲೆ ಪ್ರೀತಿ ಇದ್ದರೂ ಕೂಡ ಯುದ್ಧ ನೀತಿಯನ್ನು ಎಲ್ಲಿಯೂ ಮರೆತಿಲ್ಲ ಭೀಷ್ಮ.

ಗಂಗೆಯ ಮಗ ಗಾಂಗೇಯ ಎಂದೂ ಕರೆಯಲ್ಪಡುವ ಭೀಷ್ಮ ಶಿಖಂಡಿಯ ಮುಂದೆ ಶಸ್ತ್ರಾಸ್ತ್ರಗಳನ್ನು ತ್ಯಾಗ ಮಾಡಿ ಪ್ರಣತ್ಯಾಗಕ್ಕೆ ಸಿದ್ಧನಾಗುತ್ತಾರೆ. ಇದೂ ಕೂಡ ಭೀಷ್ಮ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂಬುದಕ್ಕೆ ಒಂದು ಉದಾಹರಣೆ. ಗಾಂಗೇಯ ಕೊನೆಗೆ ಯುದ್ಧಭೂಮಿಯಲ್ಲಿ ಸೋತು ಬಿಳುವಾಗ, ಅರ್ಜುನ ತನ್ನ ಬಾಣಗಳಿಂದ ಹಾಸಿಗೆಯನ್ನು ಮಾಡಿ ಅದರಲ್ಲಿ ಭೀಷ್ಮ ಮಲಗುತ್ತಾರೆ. ತಾನು ಸಾಯುವುದಕ್ಕೂ ಮುನ್ನ ಪೌತ್ರನಾದ ಯುಧಿಷ್ಠಿರನಿಗೆ ಆರೋಗ್ಯ ಹಾಗೂ ಆಯಸ್ಸು ಹೆಚ್ಚಿಸುವಂಥ 12 ಮಾರ್ಗಗಳನ್ನು ಉಪದೇಶ ಮಾಡುತ್ತಾರೆ. ಭೀಷ್ಮ ಹೇಳಿದ 12 ಸೂತ್ರಗಳು:

ಮೊದಲನೆಯದಾಗಿ ಮನಸ್ಸಿನ ನಿಗ್ರಹ. ಮನಸನ್ನು ಎಲ್ಲ ವಿಷಯಗಳಲ್ಲೂ ನಿಗ್ರಹಿಸುವುದು ಬಹಳ ಮುಖ್ಯ. ಆಹಾರ ಸೇವನೆಯ ವಿಷಯದಲ್ಲಿಯೂ ಅಷ್ಟೇ. ಬೇಕಾದಷ್ಟೇ ತಿಂದರೆ ಆರೋಗ್ಯವೂ ಉತ್ತಮವಾಗಿರುವುದು ಮತ್ತು ಆಯಸ್ಸು ಕೂಡ ಹೆಚ್ಚುತ್ತದೆ. ಎರಡನೆಯದಾಗಿ ಸುಳ್ಳು ಹೇಳಬಾರದು. ಸುಳ್ಳು ಹೇಳುವುದು ಯಾವುದೇ ಕಾರಣಕ್ಕೂ, ಯಾರಿಗೂ ಒಳಿತನ್ನು ಮಾಡುವುದಿಲ್ಲ. ಇದರಿಂದ ಅಪಾಯವೇ ಹೆಚ್ಚು. ಇನ್ನು ಮೂರನೆಯದಾಗಿ ಆಸೆಯೇ ದು:ಖಕ್ಕೆ ಮೂಲ. ಆಸೆ ಪಡಬೇಕು ಆದರೆ ಅದು ಅತಿಯಾಸೆ ಆಗಬಾರದು. ಹಾಗೆಯೇ ಎಲ್ಲರೂ ಎಲ್ಲದಕ್ಕೂ ಆಸೆ ಪಡುವುದು ಕೂಡ ತಪ್ಪು.

ನಾಲ್ಕನೆಯದಾಗಿ ಕಟುವಾದ ಮಾತುಗಳನ್ನು ಅಡದಿರುವುದು. ಬೇರೆಯವರ ಬಳಿ ಕಟುವಾದ ಮಾತುಗಳನ್ನಾಡಿ, ವಾದ ಮಾಡಿದರೆ ನಮ್ಮ ಶಕ್ತಿ ವ್ಯಯವಾಗುವುದೇ ಹೊರತಾಗಿ ಬೇರೇನೂ ಆಗುವುದಿಲ್ಲ. ಐದನೆಯದಾಗಿ ತಾಳ್ಮೆ. ಮನುಷ್ಯನಲ್ಲಿ ಇರಲೇಬೇಕಾದ ಒಂದು ಗುಣ ಅದು ತಾಳ್ಮೆ. ಸಹನೆಯೊಂದಿದ್ದರೆ ಎಂಥ ಸಮಸ್ಯೆಯನ್ನು ಬೇಕಾದರೂ ಬಗೆಹರಿಸಬಹುದು. ಆರನೆಯದಾಗಿ ಸಹಾಯ. ನಿರ್ಗತಿಕರಿಗೆ, ಮನೆಗೆ ಬಂದ ಅತಿಥಿಗಳಿಗೆ. ಸಹಾಯ ಬಯಸಿಬಂದ ಅಸಹಾಯಕರಿಗೆ ಯಾವುದೇ ನಿರೀಕ್ಷೆಇಲ್ಲದೆ ಸಹಾಯ ಮಾಡುವುದೇ ಉತ್ತಮ ಮನಸ್ಥಿತಿಯ ಗುಟ್ಟು.

ಏಳನೆಯದಾಗಿ ಧರ್ಮ ನಿಂದನೆ ಮಾಡಬಾರದು. ಇಲ್ಲಿ ಧರ್ಮವೆಂದರೆ ಸನ್ಮಾರ್ಗದಲ್ಲಿ, ಸನ್ನಡತೆಯಿಂದ ಬದುಕುವುದು. ಇದು ಆಯಸ್ಸನ್ನು ಹೆಚ್ವಿಸುತ್ತದೆ. ಎಂಟನೆಯದಾಗಿ ಧರ್ಮ ಗ್ರಂಥಗಳನ್ನು ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬಹುದು. ಇದು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಒಂಬತ್ತನೇಯದಾಗಿ ಹಗಲಿನಲ್ಲಿ ಅನಿವಾರ್ಯತೆ ಹೊರತುಪಡಿಸಿ ಮಲಗುವುದು ಸರಿಯಲ್ಲ. ಇದು ಅಲಸ್ಯವನ್ನು ಹೆಚ್ಚಿಸುತ್ತದೆ. ದೇಹದ ಆರೋಗ್ಯಕ್ಕೆ ಇದು ಒಳ್ಳೆಯದಲ್ಲ.

ಹತ್ತನೆಯದಾಗಿ ಗೌರವಿಸುವುದು. ಯಾವುದೇ ನಿರೀಕ್ಷೆ ಇಲ್ಲದೆ ಇತರರನ್ನು ಗೌರವಿಸಬೇಕು. ಇದು ಕೂಡ ನಮ್ಮ ಮನಸ್ಸಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹನ್ನೊಂದನೆಯದಾಗಿ ಕೋಪ ನಿಯಂತ್ರಣ. ಕೋಪವನ್ನು ನಿಗ್ರಹಿಸಿಕೊಳ್ಳುವುದು ಆರೋಗ್ಯಕ್ಕೆ ಸದಾ ಒಳ್ಳೆಯದು. ಕೋಪ ಮಾಡಿಕೊಳ್ಳುವುದರಿಂದ ಸಂಬಂಧಗಳು ಹಾಳಾಗುವುದು ಮಾತ್ರವಲ್ಲದೆ ಆರೋಗ್ಯವೂ ಕೂಡ ಹದಗೆಡುತ್ತದೆ. ಹನ್ನೆರಡನೇಯದಾಗಿ ಆಹಾರ ಸೇವನೆ. ಕೇವಲ ಬಾಯಿ ರುಚಿಗಾಗಿ ತಿನ್ನುವುದಕ್ಕಿಂತ ಉತ್ತಮ ಆರೋಗ್ಯಕ್ಕಾಗಿ ತಿನ್ನಬೇಕು. ಇದನ್ನು ಜೀವನಕ್ಕೆ ಹೋಲಿಸಿದರೆ ಬಾಯಿ ಚಪಲಕ್ಕೆ ಅನಗತ್ಯ ಮಾತುಗಳನ್ನಾಡಬಾರದು. ಇವೆಲ್ಲವೂ ಭೀಷ್ಮ, ಯುಧಿಷ್ಠಿರನಿಗೆ ತಿಳಿಸಿದ ಆರೋಗ್ಯದ ಸೂತ್ರಗಳು. ಇವುಗಳನ್ನು ನಮ್ಮ ಜೀವನದಲ್ಲಿಯೂ ಕೂಡ ಅಳವಡಿಸಿಕೊಂಡರೆ ಆರೋಗ್ಯ, ಆಯಸ್ಸು ಎರಡೂ ಹೆಚ್ವುವುದು ಶತ:ಸಿದ್ಧ.

Comments are closed.